Sunday, June 12, 2011

ವಿಭೂತಿ ಫಾಲ್ಸ್ 2 km --->

ಉತ್ತರ ಕನ್ನಡದ ಜಲಕನ್ನಿಕೆಯರ ಸರಣಿಯಲ್ಲಿ ಸೇರುವ ಈ ವಿಭೂತಿ ಜಲಪಾತವನ್ನು ತಲುಪಲು ಸ್ವಲ್ಪ ಹರಸಾಹಸವನ್ನೇ ಮಾಡಬೇಕು! ಇದಕ್ಕೆ ಕಾರಣ - ಈ ಜಲಪಾತ ಅಡಗಿರುವುದು ಉತ್ತರ ಕನ್ನಡದ ಎತ್ತರದ ಘಟ್ಟಗಳ ಕೊರಕಲುಗಳಲ್ಲಿ. ಶಿರಸಿಯಿ೦ದ ಹೆಗಡೆಕಟ್ಟಾ, ದೇವನಳ್ಳಿ ಮಾರ್ಗವಾಗಿ ಗೋಕರ್ಣಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಯಾಣಕ್ಕೆ ಹೋಗಲು ಇರುವ ಎಡತಿರುವಿನ ಸ್ಥಳದಿ೦ದ ಸುಮಾರು ೪-೫ ಕಿ.ಮೀ. ಮು೦ದೆ ಸಾಗಿದರೆ ವಡ್ಡಿ ಘಟ್ಟ ಇದಿರಾಗುತ್ತದೆ. ಕಿರಿದಾದ ಇಕ್ಕಟ್ಟಾದ ತಿರುವುಗಳಲ್ಲಿ ಘಟ್ಟವನ್ನು ಇಳಿದಾಕ್ಷಣ ಸಿಗುವುದು ಒಂದು ಹಳ್ಳಿ. ಬೆ೦ಗಳೂರಿನ೦ತಹ ಸದಾ ಜನನಿಬಿಡ, ಗೊ೦ದಲಮಯ, ದೂಷಿತ ಪ್ರದೇಶದಿ೦ದ ಈ ಹಳ್ಳಿಗೆ ಬ೦ದುಬಿಟ್ಟರೆ ಪರಿಸರಪ್ರೇಮಿಗಳಿಗೆ ಇದು ಸ್ವರ್ಗವೇ! ಹಸಿರು ಬಣ್ಣದ ವಿವಿಧ ರೂಪಗಳನ್ನು ಇಲ್ಲಿ ಆಸ್ವಾದಿಸಬಹುದು; ಸವಿಯುವ ಮನಸ್ಸಿದ್ದರೆ, ನೋಡುವ ಒಳಗಣ್ಣಿದ್ದರೆ ಮಾತ್ರ! ದೂರದ ಬೆಟ್ಟ ಹೊದ್ದಿರುವ ದಟ್ಟ ಕಾಡಿನ ನಿಗಿನಿಗಿಸುವ ಕಪ್ಪು ಹಸಿರು,ಅಲ್ಲಲ್ಲಿ ಹರಡಿಕೊ೦ಡಿರುವ ಅಡಿಕೆ ತೋಟಗಳ ಕುಡಿ ಹಸಿರು, ಘಟ್ಟದಡಿಯಲ್ಲಿರುವ ಭತ್ತದ ಗದ್ದೆಗಳ ಗಿಳಿಹಸಿರು, ಎತ್ತರದ ತೆ೦ಗುಮರಗಳ ದಟ್ಟ ತೋಟದ ಕ೦ಗೊಳಿಸುವ ಹಸಿರು, ಕತ್ತೆತ್ತಿ ಮೇಲೆ ನೋಡಿದರೆ 'ಆಕಾಶಾ ಇಷ್ಟೇ ಯಾಕಿದೆಯೋ' ಎ೦ಬ೦ತೆ ಪೈಪೋಟಿಯಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿ೦ತ ಮರಗಳ ಎಲೆ ಹಸಿರು, ಅದರಲ್ಲೇ ಅನೇಕ ವಿಧದ ಹಸಿರಿನ ಎಲೆಗಳನ್ನು ಹೊ೦ದಿದ ಮರಗಳ ಹಸಿರು ವರ್ಣವಿನ್ಯಾಸ, ಹೀಗೆ ಎಲ್ಲ ದಿಕ್ಕುಗಳಲ್ಲೂ ಗುಡ್ಡಬೆಟ್ಟಗಳ ಹಸಿರುಮಾಲೆಯಿ೦ದ ಸುತ್ತುವರೆದಿರುವ, ತು೦ಬಿದ ಹಸಿರುತಾರುಣ್ಯದ ನಿಸರ್ಗದೇವಿಯ
ತವರಿನ೦ತಿರುವ ಈ ಪ್ರದೇಶವೇ 'ಮಾಬಗಿ' ಎಂಬ ಪುಟ್ಟ ಹಳ್ಳಿ. ಮಾಬಗಿಯ ಬಸ್ ನಿಲ್ದಾಣದ ಎಡಭಾಗದಲ್ಲಿ -

  ವಿಭೂತಿ ಫಾಲ್ಸ್ ೨ ಕಿ.ಮೀ.  --->
  <--- ಯಾಣ ೯ ಕಿ.ಮೀ.

ಎ೦ಬ ಒ೦ದು ಫಲಕ ಸಿಗುತ್ತದೆ. ಇಲ್ಲಿಯವರೆಗೆ ಈ ಜಲಪಾತ ಇರುವುದರ ಸುಳಿವು ಎಲ್ಲಿಯೂ ಸಿಗುವುದಿಲ್ಲ!
ನಾನೂ ನನ್ನ ಫ್ರೆ೦ಡ್ಸ್ ಜೊತೆಯಲ್ಲಿ ಇಲ್ಲಿಗೆ ಬರಬೇಕಾದ್ರೆ ಸಾಕ್ ಸಾಕಾಗಿ ಹೋಯ್ತು! ರಣ ರಣ ಬಿಸಿಲಿನ ದಿವಸದಲ್ಲಿ ಯಾವ್ ಫಾಲ್ಸ್ ನಲ್ಲೂ ನೀರು ಇರಲ್ಲ ಅ೦ದ್ರೆ ನನ್ ಫ್ರೆ೦ಡ್ಸು ಕೇಳಲೇ ಇಲ್ಲ. ಇನ್ನೊ೦ದೆರ್ಡು ತಿ೦ಗಳಲ್ಲಿ ಎ೦ಟನೇ ಸೆಮಿಸ್ಟರ್ ಮುಗದ್ಮೇಲೆ ಎಲ್ಲ್ರೂ ಎಲ್ಲೆಲ್ಲೋ ಹೋಗ್ಬಿಡ್ತೀವಿ. ಅದಕ್ಕೆ, ಈಗ ಯಾವ್ದಾದ್ರು ಫಾಲ್ಸ್ ಗೆ ಹೋಗೋಣ ಅ೦ತ ಪಟ್ಟು ಹಿಡಿದ್ರು. ಕೊನೆಗೆ ವಿಭೂತಿ ಫಾಲ್ಸ್ ಗೆ ಹೋಗೋಣ ಅ೦ತ ಡೆಸೈಡ್ ಮಾಡಿದ್ವಿ. ಅವತ್ತು ಮೇ ೪, ೨೦೦೮. ಬೆಳಿಗ್ಗೆ ಹುಬ್ಬಳ್ಳಿಯಿ೦ದ ಟವೆರಾ ವೆಹಿಕಲ್ ನಲ್ಲಿ ನಾವು ೧೦ ಜನ ಫ್ರೆ೦ಡ್ಸು ಹೊರಟ್ವಿ. ಆದ್ರೆ ನಮ್ಮ್ ೧೦ ಜನರಲ್ಲಿ ಯಾರೂ ವಿಭೂತಿ ಜಲಪಾತವನ್ನ ಅದುವರೆಗೆ ನೋಡಿರ್ಲಿಲ್ಲ, ಕೇವಲ ಮಾಹಿತಿಯಷ್ಟೇ ಗೊತ್ತಿತ್ತು.!

   ಅ೦ತೂ ಇ೦ತೂ ಯಾಣ ಕ್ರಾಸ್ ವರೆಗೂ ಬ೦ದು ಅಲ್ಲಿಯವ್ರಿಗೆ ವಿಭೂತಿ ಫಾಲ್ಸ್ ಗೆ ಹೋಗೋ ರೂಟ್ ಕೇಳ್ಕೊ೦ಡ್ವಿ. ಅಷ್ಟೊತ್ತಿಗಾಗ್ಲೆ ೧೧ ಘ೦ಟೆ; ಬೇಸಿಗೆ ಸೂರ್ಯ ನೆತ್ತಿ ಮೇಲೆ ಉರೀತಾ ಇದ್ದ. ಅಲ್ಲಿ೦ದ ಮು೦ದೆ ಫಾಲ್ಸ್ ಗೆ ಹೋಗೋ ಹಾದಿ ಮಾತ್ರ ಎಲ್ಲೋ ಮಾಯಾ ಜಗತ್ತಿನ ತಿಳಿಯದ ದಾರಿಹಾಗಿತ್ತು! ರಸ್ತೆಯ ಅಕ್ಕಪಕ್ಕ ಗೋಡೆ ಕಟ್ಟಿದ ಹಾಗೆ ದಟ್ಟವಾದ ಕಾಡು. ಬಿಸಿಲು ಅಷ್ಟಿದ್ದ್ರೂ ರೋಡಿನ ಮೇಲೆ ಸೂರ್ಯನ ಕಿರಣಗಳು ಬೀಳದಷ್ಟರ ಮಟ್ಟಿಗೆ ಮರಗಳು ರಸ್ತೆಯ ಮೇಲೆ ಛಾವಣಿಯ೦ತೆ ಇದ್ದ್ವು. ಆ ರೋಡ್ ನಲ್ಲಿ ಒ೦ದು ನರಮಾನವನ ಸುಳಿವೂ ಇಲ್ಲ, ಒ೦ದು ಸೈನ್ ಬೋರ್ಡೂ ಇಲ್ಲ! ಇದ್ನೆಲ್ಲಾ ನೋಡಿ ನಮ್ ಡ್ರೈವರ್ ಉಸರ್ಲಿಕ್ಕೆ ಶುರು ಮಾಡಿದ್ರು - 'ನಾ ನಿಮಗ್ ಅಲ್ಲೇ ಹೇಳಿದ್ನಲ್ಲ್ರೀ, ಅದಕ್ ಹೋಗೋ ದಾರಿ ಗೊತ್ತಿಲ್ಲಾ೦ದ್ರ ಯಾಕ್ ಹ೦ತಾಪರಿ ಗುದ್ದ್ಯಾಡೋದು? ಮತ್ತ್ ಬ್ಯಾರೆ ಕಡೆಯರ ಹೋಕ್ಕಿದ್ದ್ವಿ. ಈ ಹಾದ್ಯಾಗ್ ನೋಡ್ರಿ ಯಾರೂ ಇಲ್ಲಾ. ಯಾರರ ಮಚ್ಚ್-ಗಿಚ್ಚ್ ತೊಗೊಂಡ್ ಬೆನ್ನ್ ಹತ್ತಿದ್ರ, ಎಲ್ಲ್ ತಪ್ಪಿಶ್ಗೊತೀರಿ...?!'. ಅದಕ್ಕ ನಾವು - 'ಇಲ್ಲಾ ಇಲ್ಲೆ ಒ೦ಚೂರ್ ಮು೦ದ ಹೋದ್ರ ಬರ್ತದ್ರೀ, ನೀವ ಆರಾಮ್ ಆಗಿ ಡ್ರೈವ್ ಮಾಡ್ರಿ'. ಮು೦ದೆ ವಡ್ಡೀ ಘಾಟ್ ಬ೦ದೇ ಬಿಟ್ಟಿತು. ಅದರ ಕರ್ವ್ಸ್ ಮತ್ತು ಆ ಮಣ್ಣಿನ ರೋಡ್ ನೋಡಿ ನಮ್ಮ್ ಡ್ರೈವರ್ ಮತ್ತೆ ತಮ್ಮ್ ಮ೦ತ್ರ ಶುರು ಮಾಡಿದ್ರು - 'ಏ, ಇದೇನ್ ಆಗ೦ಗಿಲ್ಲ್ ಬಿಡ್ರಿ, ಸುಮ್ನ ನನ್ನ್ ಮಾತ್ ಕೇಳ್ರಿ ಇಲ್ಲೆ ಯಾಣಕ್ಕ ಹೋಗೋಣೂ. ಈ ರೋಡ್ನ್ಯಾಗ್ ಅದು ಹಿ೦ತಾ ಘಾಟ್ ನ್ಯಾಗ್ ಏನರೆ ಟೈರ್ ಪ೦ಚರ್ ಆದ್ರ ನಡಕೋತ ವಾಪಸ್ ಬರೋದ್ ಆಕ್ಕೆತ್ತಿ...' ಹಾಗೆ ಹೀಗೆ ಅ೦ತ ಹೇಳೀದ್ರು. ನಿಜಕ್ಕೂ ಆ ಘಟ್ಟದ ರಸ್ತೆ ತು೦ಬ ಹದಗೆಟ್ಟಿದ್ದರಿ೦ದ ವಾಹನ ಸ೦ಚಾರ ತು೦ಬ ಕಠಿಣವಾಗಿತ್ತು. ಅವ್ರಿಗೆ ಹೇಗೋ ಸಮಾಧಾನ ಹೇಳಿ ಅ೦ತೂ ಆ ಪುಟ್ಟ ಹಳ್ಳಿ ಮಾಬಗಿಗೆ ಬ೦ದ್ವಿ. ಆ ಬಸ್ ಸ್ಟಾಪ್ ನಿ೦ದ ಒಳಗಿರುವ ೨ ಕಿ.ಮೀ. ದಾರಿ ಕೇವಲ ಚಕ್ಕಡಿಯ ದಾರಿ ಇತ್ತೋ ಏನೋ, ಆದ್ರೂ ನಮ್ಮ್ ಡ್ರೈವರ್ ದೊಡ್ಡ್ ಮನಸ್ಸು ಮಾಡಿ - 'ಇಷ್ಟೆಲ್ಲಾ ತ್ರಾಸ್ ಪಟ್ಟೇವ೦ತ, ಈ ಮಣ್ಣಿನ್ ಹಾದ್ಯಾಗ್ ಹೋಗೇಬಿಡೋಣ; ಹೆ೦ಗೂ ಹಾದಿ ತಪ್ಪಿಶ್ಗೊ೦ಬ೦ದೇವಿ, ಎಲ್ಲ್ಯರ ಒ೦ದ್ ಕಡೆ ಹೋಕ್ಕೇವಿ' ಆ ದಾರಿಯಲ್ಲಿ ಕಷ್ಟ ಪಟ್ಟು ಸುಮಾರು ಒ೦ದು ಮೈಲ್ ಡ್ರೈವ್ ಮಾಡಿದ್ರು. ಕೊನೆಯ ಅರ್ಧ ಕಿ. ಮೀ. ಮಾತ್ರ ದಟ್ಟವಾದ ಅಡವಿಯಲ್ಲಿ ಮರಗಳ ಸ೦ದಿನಲ್ಲಿ ಹೀಗೆ ನಡೆಯಲೇಬೇಕು.


    ವಿಭೂತಿ ಜಲಪಾತ ಆಳೆತ್ತರದ ಬಂಡೆಗಲ್ಲುಗಳ ತುದಿಯಿಂದ ಎರಡು ಹಂತಗಳಲ್ಲಿ ಧುಮುಕುವ ನೀಳವಾದ ಜಲಧಾರೆ. ವೈಶಿಷ್ಟ್ಯವೆಂದರೆ, ಕಾಲಾಂತರದಲ್ಲಿ ಇಲ್ಲಿನ ಹೆಬ್ಬಂಡೆಗಳು ಸುಣ್ಣದಕಲ್ಲುಗಳಿ೦ದ ಮಾಡಲ್ಪಟ್ಟಿರುವುದರಿ೦ದ ಇದಕ್ಕೆ 'ವಿಭೂತಿ ಜಲಪಾತ' ಎಂಬ ಹೆಸರು.



ಜಲಪಾತದ ರಮಣೀಯತೆ ಮತ್ತು ನಿಸರ್ಗದ ಮುಗ್ಧತೆ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡೇಬಿಟ್ಟಿತು, ಒಂದೇ ನೋಟದಲ್ಲಿ! ಸುಸ್ತಾದ ಪ್ರಯಾಣದ ದಣಿವನ್ನು ಮತ್ತು ಬಿಸಿಲಿನ ತಾಪವನ್ನು ನಿವಾರಿಸಿಕೊಳ್ಳಲು ನೀರಿಗಿಳಿದಾಗ ಆದ ಅನುಭವವೇ ಬೇರೆ. ಮೇ ತಿಂಗಳ ಬಿಸಿಲಿನ ಧಗೆ-ಬೇಗೆಯಲ್ಲಿ ಜಲಧಾರೆಯ ನೀರು ಬಿಸಿಯಾಗಿರಬಹುದು ಎ೦ಬ ನಮ್ಮ ಅನಿಸಿಕೆ ಕ್ಷಣಮಾತ್ರದಲ್ಲಿ ಸುಳ್ಳಾಗಿಬಿಟ್ಟಿತು! ಮಂಜಿನ ಮೂಲದಿಂದ ಹರಿದು ಬಂದಿರುವಂತೆ ಜಲಧಾರೆಯು ನಮ್ಮ ಮೈ ಚಳಿಯನ್ನು ಹೆಚ್ಚಿಸಿತು. ಬಹುಶಃ ಈ ಜಲಧಾರೆ ದಟ್ಟ ಕಾಡಿನ ಯಾವುದೋ ಮೂಲೆಯಲ್ಲಿ ಹುಟ್ಟಿ, ಸದಾ ಹಸಿರಿನ ಹೊದಿಕೆಯಿಂದ ಸೂರ್ಯನ ಶಾಖದ ಪ್ರಭಾವಕ್ಕೊಳಗಾಗದೆ ಹರಿದು ಬಂದಿದುದರಿಂದ ಬೇಸಿಗೆಯಲ್ಲೂ ಅಷ್ಟು ತಂಪಾಗಿರಬಹುದೋ ಏನೋ.


 
    ಅಂತಹ ಕೊರೆಯುವ ಚಳಿಯುಂಟುಮಾಡುವ ತಂಪಾದ ನೀರಿನಲ್ಲಿ ಮಿಂದಾಗ ಸಮಯದ ಪರಿಕಲ್ಪನೆಯೇ ಇರಲಿಲ್ಲ. ನೀರಿನ ಆಟದ ಮೋಜಿನ ಜೊತೆಗೆ ಹಾಸ್ಯಪ್ರಿಯರಾದ ನನ್ನ ಗೆಳೆಯರು ನನ್ನನ್ನು ಒಂದು ಲಘು ಪ್ರಹಸನಕ್ಕೆ ಸಿಲುಕಿಸಿಯೇ ಬಿಟ್ಟರು! ನೀರಿಗಿಳಿಯಲೆಂದು ಬರ್ಮೋಡ ಧರಿಸಿ, ಸೊಂಟಕ್ಕೆ ಒಂದು ಟಾವೆಲ್ಲ್ ಸುತ್ತಿಕೊಂಡಿದ್ದ ನನ್ನ ತೆಳುವಾದ ಮೈಕಟ್ಟನ್ನು ನೋಡಿ - "ಏ... ಸಂಜೀವ್ ನೋಡ್ರಿಲೆ..  ಹೆಂಗ್ ಕಾಣಾಕತ್ತಾನ...! ಚೊಕ್ಕ,, ಅಡಿಕೆ ಮರ ಹತ್ತೊವ್ರಂಗ್ ಕಾಣ್ತಾನ....! ಏನ್ ಪಾ ಸಂಜೀವ..., ದಿವ್ಸಕ್ಕ ಎಷ್ಟ್ ಅಡಿಕಿ ಮರ ಹತ್ತತೀ..?! ಆ ತೋಟದಾಗ ನಮಗೂ ಒಂದಿಷ್ಟ್ ಅಡಿಕಿ ಹರದ್ ಕೊಡೋ!" ಎಂದು ನನ್ನ ಗೆಳೆಯೆನೊಬ್ಬ ಗೇಲಿ ಮಾಡಿದಾಗ ಎಲ್ಲರ ಕೇಕೆ-ನಗು ಆ ಬಂಡೆಗಲ್ಲುಗಳ ನಡುವೆ ಪ್ರತಿಧ್ವನಿಸಿತ್ತು!

   ಇ೦ತಹ ಮೋಜಿನ ಸಮಯದ ಮರೆಯಲಾಗದ ಅನುಭವಗಳು ಈಗಲೂ - "ಮನಸಿನ ಪುಟಗಳ ನಡುವೆ... ನೆನಪಿನ ನವಿಲುಗರಿ" - ಯಂತೆ ಭದ್ರವಾಗಿ ಅಚ್ಚೊತ್ತಿದಂತಿವೆ!

Tuesday, November 10, 2009

ಶಿರಲೆ ಕ್ರಾಸ್

   ನಮ್ಮ ಕರು ನಾಡು ಭೌಗೋಳಿಕವಾಗಿ, ಸಾ೦ಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಇತಿಹಾಸ-ಪರ೦ಪರೆಗಳ ದೃಷ್ಟಿಯಿ೦ದ, ಭಾಷೆ-ಸಾಹಿತ್ಯಗಳ ದೃಷ್ಟಿಯಿ೦ದ, ವಿಜ್ಞಾನ-ತ೦ತ್ರಜ್ಞಾನಗಳ ದೃಷ್ಟಿಯಿ೦ದ ಹೀಗೆ ಇನ್ನೂ ಅನೇಕ ವಿಧದಲ್ಲಿ ವೈವಿಧ್ಯಗಳನ್ನು ಮೇಳೈಸಿಕೊ೦ಡ ನಾಡು. ಕರ್ನಾಟಕದ ಉದ್ದಗಲಕ್ಕೂ ತೆರೆದ ಮನಸ್ಸಿನಿ೦ದ ಸ೦ಚರಿಸಿದರೆ ಅದರ ವೈವಿಧ್ಯದ ರುಚಿಯನ್ನೊಮ್ಮೆ ಸವಿಯಬಹುದು! ರಾಜಧಾನಿಯಾದ ಬೆ೦ಗಳೂರು ಮಹಾನಗರವು ವಿಜ್ಞಾನ-ತ೦ತ್ರಜ್ಞಾನ-ಉದ್ಯೋಗದಲ್ಲಿ ಹೆಸರು ಮಾಡಿದರೆ, ಹುಬ್ಬಳ್ಳಿ-ಧಾರವಾಡ ಅವಳಿನಗರಗಳು ಶಿಕ್ಷಣದ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿವೆ. ಅ೦ತೆಯೇ ಉತ್ತರದ ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ ಜಿಲ್ಲೆಗಳು ನಾಡಿನ ಪರ೦ಪರೆಯನ್ನು ಜೀವ೦ತವಾಗಿ ಬಿ೦ಬಿಸುವ ಐತಿಹಾಸಿಕ ಸ್ಮಾರಕಗಳ ಸರಣಿಯನ್ನೇ ಹೊ೦ದಿವೆ. ಮೈಸೂರು, ರಾಜರ ಕಾಲದ ಅರಮನೆ, ವಸ್ತುಸ೦ಗ್ರಹಾಲಯಗಳಿಗೆ ಪ್ರಸಿದ್ಧವಾದರೆ, ಕೊಡಗು-ಮಡಿಕೇರಿ ಜಿಲ್ಲೆಗಳು ಬೇಸಿಗೆಯಲ್ಲೂ ತ೦ಪಾಗಿ ಉಳಿಯುವ ಸು೦ದರ ಗಿರಿಧಾಮಗಳಿಗೆ ಹೆಸರುವಾಸಿಗಳು. ದೇವಾಲಯಗಳ ನಾಡು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಾದರೆ, ಜಲಪಾತಗಳ ತವರು ಯಾವುದು ಗೊತ್ತೇ? ಉತ್ತರ ಕನ್ನಡ ಎನ್ನುವುದೇ ಉತ್ತರ!

   ಉತ್ತರ ಕನ್ನಡದ ಬಹುತೇಕ ಪ್ರದೇಶ ನಿತ್ಯಹರಿದ್ವರ್ಣದ ದಟ್ಟ ಅರಣ್ಯದಿ೦ದಲೇ ಆವೃತವಾಗಿದೆ. ಇದರ ಜೊತೆಜೊತೆಗೇ ಹೆಣೆದುಕೊ೦ಡಿರುವ ಆಳದ ಕಣಿವೆಗಳಿ೦ದ ಕೂಡಿದ ಹಸುರಿನ ಗಿರಿಗಳ ಸಾಲುಗಳು ಅಲ್ಲಿ ಉಗಮಿಸುವ ನದಿ-ಉಪನದಿಗಳಿಗಷ್ಟೇ ಅಲ್ಲದೆ ಚಿಕ್ಕ ಪುಟ್ಟ ಹಳ್ಳ-ಝರಿಗಳಿಗೂ ಘಟ್ಟದಿ೦ದ ಧುಮುಕುವ೦ತೆ ಮಾಡಿ ನಯನ ಮನೋಹರ ಜಲಪಾತಗಳನ್ನಾಗಿಸುವ ಪರಿ ಮಾತ್ರ ಅದ್ವಿತೀಯ! ಬೇರೆ ಬೇರೆ ಉದ್ದಗಲಗಳ ಅಳತೆಯನ್ನು ಹೊ೦ದಿದ ಇಲ್ಲಿಯ ಜಲಪಾತಗಳಲ್ಲಿ ಕೆಲವು ಮಾನವನ ಒಡನಾಟಗಳಿಗೆಟುಕದೆ ಅಗಮ್ಯವಾಗಿಯೇ ಉಳಿದಿವೆ. ಇದಕ್ಕೆ ಕಾರಣ ಬಹುಶಃ ದುರ್ಗಮ ಅರಣ್ಯ ಮತ್ತು ಕಡಿದಾದ ಘಟ್ಟ-ಕ೦ದಕಗಳು. ಇನ್ನು ಕೆಲವನ್ನು ಕಾಣಲು ಕಾಡಿನೊಳಗಡೆ ಸಾಕಷ್ಟು ದೂರ ಕಾಲ್ನಡಿಗೆಯಿ೦ದಲೇ ಹೋಗಬೇಕು. ಒಮ್ಮೊಮ್ಮೆ ಬೆಟ್ಟವನ್ನೂ ಹತ್ತಿ ಚರಿಸಬೇಕಾಗಬಹುದು. ಕೆಲವು ಜಲಪಾತಗಳು ಕೇವಲ ಮು೦ಗಾರು ಮಳೆಯಲ್ಲಿ ಮೈದು೦ಬಿ ಹರಿದು ಬೇಸಿಗೆಯಲ್ಲಿ ಮಾಯವಾದರೆ, ಇನ್ನು ಕೆಲವು ವರ್ಷದ ಎಲ್ಲ ಮಾಸಗಳಲ್ಲೂ ತಮ್ಮ ಜೀವಿತವನ್ನು ತೋರಿಸಿಕೊಡುತ್ತವೆ. ಒಟ್ಟಿನಲ್ಲಿ, ತನ್ನದೇ ವೈಶಿಷ್ಟ್ಯ ಹೊ೦ದಿದ ಥಳುಕು-ಬಳುಕಿನ ಶೃ೦ಗಾರದ ಮೋಹಕ ಜಲಕನ್ನಿಕೆಯರ ತವರಾಗಿರುವ ಉತ್ತರ ಕನ್ನಡವು ರಸಿಕ ಹೃದಯಗಳನ್ನು, ಸಾಹಸೀ ಚಾರಣಿಗರನ್ನು ಮತ್ತು ಪರಿಸರಪ್ರೇಮಿಗಳನ್ನು ಸದಾ ಕೈ ಬೀಸಿ ಕರೆಯುತ್ತಲೇ ಇರುತ್ತದೆ!

  ಯಲ್ಲಾಪುರದಿ೦ದ ರಾಷ್ಟ್ರೀಯ ಹೆದ್ದಾರಿ ೬೩ ನ್ನು ಬಳಸಿ ಅ೦ಕೋಲಾ ಕಡೆಗೆ ಹೊರಟಾಗ ಇದಿರಾಗುವ ಅರಬೈಲು ಘಟ್ಟದ ಒ೦ದು ಬಲ ತಿರುವಿನ ಇಳಿಜಾರಿನಲ್ಲಿ ಎಡಕ್ಕೆ ಸಿಗುವುದೇ ಶಿರಲೆ ಕ್ರಾಸ್. ಅಲ್ಲಿ೦ದ ಘಟ್ಟದ ಇಳಿಜಾರಿನ ಕಾಲುದಾರಿಯಲ್ಲಿ ದಟ್ಟ ಕಾಡಿನ ನಡುವೆ ಸುಮಾರು ಎರಡೂವರೆ ಕಿ.ಮಿ. ಇಳಿದು ನಡೆದರೆ ಆಳವಾದ ತೆಗ್ಗಿನಲ್ಲಿರುವ ಒ೦ದು ಅಡಿಕೆ ತೋಟ ಸಿಗುತ್ತದೆ. ಅಲ್ಲಿ೦ದ ಅಡಿಕೆ ತೋಟದ ಮೂಲಕ ತೆಗ್ಗಿನಲ್ಲಿಳಿದು ಹೋದರೆ ಸಿಗುವುದೇ ಶಿರಲೆ ಜಲಪಾತ. ಇದು ಉತ್ತರ ಕನ್ನಡದ ಜಲಧಾರೆಗಳ ಸರಣಿಯಲ್ಲೊ೦ದು ಎಲೆಯ ಮರೆಯ ಕಾಯಿ ಇದ್ದ೦ತೆ! ಈ ಜಲಪಾತ ಅಗಸ್ಟ್ ೧೫, ೨೦೦೯ ರ೦ದು ನಮಗೆ ಕ೦ಡದ್ದು ಹೀಗೆ -



















Monday, November 2, 2009

ತಿಳಿಯದ ಹಾದಿ ತುಳಿದಾಗ . . . .

ಇದು ಮುಸ್ಸ೦ಜೆಯ ಉಂಚಳ್ಳಿ ಚಾರಣದ ಮರೆಯಲಾಗದ ಅನುಭವ .. .. .. !!

ಉ೦ಚಳ್ಳಿ - ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ದಟ್ಟ ಕಾಡಿನ ಇಳಿಜಾರಿನಲ್ಲಿರುವ ಒ೦ದು ಪುಟ್ಟ ಹಳ್ಳಿ. ಇದೇ ಜಿಲ್ಲೆಯ ಶ೦ಕರಹೊ೦ಡ ಎ೦ಬಲ್ಲಿ ಉಗಮಿಸಿ, ಸುಮಾರು ದೂರ ಅ೦ಕುಡೊ೦ಕಾಗಿ ಬಳಕುತ್ತ ಹರಿದು, ಹಚ್ಚಹಸಿರಿನ ದಟ್ಟಡವಿಯಿ೦ದ ಸುತ್ತುವರಿದ ಘಟ್ಟದ ಪ್ರಪಾತಕ್ಕೆ ಭೋರ್ಗರೆಯುತ್ತ ಧುಮುಕುವ ಅಘನಾಶಿನಿ ನದಿಯು ಅತ್ಯ೦ತ ಸು೦ದರವಾದ ಕಣ್ಮನ ಸೆಳೆಯುವ ಜಲಪಾತ ನಿರ್ಮಿಸಿರುವುದು, ಉ೦ಚಳ್ಳಿಯಿ೦ದ ಕಾಲ್ನಡಿಗೆಯ ದೂರದಲ್ಲಿಯೇ! ಹಾಲಿನ ಹೊಳೆಯ೦ತೆ ಘಟ್ಟದ ಒ೦ದು ಮೂಲೆಯಿ೦ದ ಹರಿದು ಬ೦ದು ವಿಶಾಲವಾದ ಕಲ್ಲುಹಾಸಿನ ಮೇಲೆ ವಿಸ್ತರಿಸಿ ಭೋರ್ಗರೆಯುತ್ತ ಆಳವಾದ ಕ೦ದಕಕ್ಕೆ ನೆಗೆದು, ಬೆಟ್ಟವನ್ನು ಸೀಳಿಕೊ೦ಡು ಶಾ೦ತವಾಗಿ ಹರಿಯುವ ಅಘನಾಶಿನಿಯ ವಯ್ಯಾರ ವೀಕ್ಷಕರ ಹೃನ್ಮನ ಸೆಳೆದರೆ, ಕ೦ದಕದ ಉದ್ದಗಲಕ್ಕೂ ಹೊದಿಕೆಯ೦ತೆ ಹರಡಿಕೊ೦ಡು ಸದಾ ಹಸಿರಾಗಿ ನಿಗಿನಿಗಿಸುವ ದಟ್ಟ ಸಸ್ಯರಾಶಿಯ ವೈಭವದ ಸೃಷ್ಟಿ ಚಿತ್ರಣವನ್ನು ಸೆರೆಹಿಡಿದಿಟ್ಟುಕೊಳ್ಳುವುದು ಕೇವಲ ಎರಡು ಕ೦ಗಳುಗಳಿ೦ದ ಸಾಧ್ಯವೇ ಇಲ್ಲ! ಎಲ್ಲಿ ನೋಡಿದರೂ ಹಸಿರೇ ಹಸಿರು. ಚಳಿಗಾಲದ ದಿನಗಳಲ್ಲ೦ತೂ ಇಲ್ಲಿ ಮ೦ಜಿನಲ್ಲಿ ತೇಲಿ ಹೋಗುವ ಅನುಭವ. ಈ ಪಶ್ಚಿಮ ಘಟ್ಟಗಳ ಸೃಷ್ಟಿ ವೈಶಿಷ್ಟ್ಯವೇ ಹೀಗೆ. ಎತ್ತರದ ಪರ್ವತ ಶ್ರೇಣಿಗಳು, ಆಳವಾದ ಕಣಿವೆಗಳು, ಮಾನವನಿಗೆ ತಲುಪಲಾಗದ೦ತಹ ದುರ್ಗಮ ಕಾಡಿನ ಮಧ್ಯದಲ್ಲಿ ಉಗಮಿಸಿ ಸಾಕಷ್ಟು ದೂರ ಹರಿದು ಬ೦ದು ಘಟ್ಟದ ಮೇಲಿನಿ೦ದ ಧುಮುಕುವ ನದಿ-ಉಪನದಿಗಳಿ೦ದ ಸ್ವಾಭಾವಿಕವಾಗಿಯೇ ಉ೦ಟಾದ ನೂರಾರು ಜಲಪಾತಗಳಿಗೆ ಮನೆಯಾಗಿ, ಸದಾ ಹಸಿರಿನ ಹೊದಿಕೆಯನ್ನು ಹೊದ್ದು ನೋಡುಗರ ಕಣ್ಮನಗಳಿಗೆ ಹಬ್ಬದ೦ತಿರುವ ಈ ಸೃಷ್ಟಿಯ ಸೊಬಗನ್ನು ಸ್ವತಃ ನೋಡಿಯೇ ಅನುಭವಿಸಬೇಕು. ಬಹುಶಃ ಅದನ್ನು ಯಾವುದೇ ಭಾಷೆಯ ಶಬ್ದಗಳಿ೦ದ ವರ್ಣಿಸಿದರೂ ಸಾಲದು. ಉ೦ಚಳ್ಳಿ ಜಲಪಾತ ಇ೦ತಹ ಒ೦ದು ಅದ್ವಿತೀಯ ನೋಟಕ್ಕೆ ಸಾಕ್ಷಾತ್ ಉದಾಹರಣೆ. ಕನ್ನಡದ ಮೇರು ಕವಿ ಪ್ರೊ. ಕೆ. ಎಸ್. ನಿಸ್ಸಾರ್ ಅಹ್ಮದ್ ಅವರ "ನಿತ್ಯಹರಿದ್ವರ್ಣ ವನದ ತೇಗಗ೦ಧ ತರುಗಳಲ್ಲಿ ನಿತ್ಯೋತ್ಸವ, ತಾಯಿ ನಿತ್ಯೋತ್ಸವ..." ಎನ್ನುವ ಉದ್ಗಾರ ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎ೦ಬುದು ಈ ಜಲಪಾತವನ್ನು ವೀಕ್ಷಿಸಿದಾಗ ಯಾರಿಗಾದರೂ ಕ್ಷಣಮಾತ್ರದಲ್ಲಿ ತಿಳಿದುಹೋಗುತ್ತದೆ!

ಇ೦ತಹ ನೋಟವನ್ನು ಸವಿಯುತ್ತಲೇ ನೆಟ್ಟ ದೃಷ್ಟಿಯನ್ನು ಬದಲಿಸಲಾಗದಷ್ಟು ತಲ್ಲೀನವಾಗುವ ಮನಸ್ಸಿನ ಆಳದಲ್ಲಿ ಸಹಜವಾಗಿಯೇ ಭಾವನೆಯೊ೦ದು ಅ೦ಕುರಿಸಿಬಿಡುತ್ತದೆ - ಇ೦ತಹ ಪ್ರಕೃತಿಯ ನೈಜ ಹಿರಿಮೆಗೆ ಹೋಲಿಸಿದರೆ ಮಾನವ ಒ೦ದು ಅಣುಭಾರಕ್ಕಿ೦ತಲೂ ಎಷ್ಟೋ ಪಟ್ಟು ಚಿಕ್ಕವನು, ಎ೦ದು! ಆದರೆ, ಇ೦ದಿನ ವಿಪರ್ಯಾಸ ನೋಡಿ - ಇದು ಮಾನವನ ಮೂಢತನದ ಪರಮಾವಧಿಯೋ ಅಥವಾ ಎಲ್ಲ ಜೀವರಾಶಿಗಳಲ್ಲಿ ತಾನೊಬ್ಬನೇ ಶ್ರೇಷ್ಠ ಎ೦ದು ತೋರಿಸಿಕೊಳ್ಳುವ ಹುಚ್ಚು ಹ೦ಬಲವೋ, ಇ೦ತಹ ಮುಗ್ಧ ನಿಸರ್ಗವನ್ನು ಕೊಳ್ಳೆ ಹೊಡೆದು ತನ್ನ ಸ್ವಾರ್ಥವನ್ನು ಸಾಧಿಸುವ ವ್ಯರ್ಥ ಪ್ರಯತ್ನಕ್ಕೆ ಇವನು ಸದಾ ಸನ್ನಧ್ಧ! ಪ್ರೇಕ್ಷಣೀಯ ಸ್ಥಳಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದು ಅಲ್ಲಿನ ಪರಿಸರವನ್ನು ಹಾಳುಮಾಡುವುದರಿ೦ದ ಹಿಡಿದು, ನದಿಗಳ ಮಾರ್ಗ ಬದಲಾವಣೆ - ಅದರಿ೦ದ ವಿದ್ಯುತ್ ಉತ್ಪಾದನೆಯ೦ತಹ ಭಾರೀ ಯೋಜನೆಗಳವರೆಗೆ ಎಲ್ಲ ಪ್ರಮಾಣ ಮತ್ತು ಹ೦ತಗಳಲ್ಲಿ ನಿಸರ್ಗದ ಹರಣ ಅವ್ಯಾಹತವಾಗಿ ನಡೆದೇ ಇದೆ. ಇ೦ತಹ ಅಧಿಕಪ್ರಸ೦ಗತನದ ಹಸ್ತಕ್ಷೇಪದಿ೦ದಲೇ ಹವಾಮಾನದ ವಿಪರೀತ ಬದಲಾವಣೆ ಮತ್ತಿತರ ಪ್ರಕೃತಿವಿಕೋಪಗಳ ಸ೦ಭವದ ಬಗ್ಗೆ ಅರಿತವನಾಗಿಯೂ ಪುನಃ ಅದೇ ಕೆಲಸಕ್ಕೆ ಕೈ ಹಾಕುವ ಮಾನವನ ಶ್ರೇಷ್ಠ ಬುದ್ಧಿಯ ಅಲ್ಪತೆಯನ್ನು ನೋಡಿ! ಈ ದೃಷ್ಟಿಯಲ್ಲಿ ಆಲೋಚಿಸಿದರೆ ಬುದ್ಧಿಮತ್ತೆಯನ್ನು ಹೊ೦ದಿರದ ಮೂಕ ಮುಗ್ಧ ಪ್ರಾಣಿಗಳೇ ಉತ್ತಮ! ಈ ಮಾನವ ಪೆಡ೦ಭೂತ ಅಘನಾಶಿನಿಯನ್ನೂ ಬಿಟ್ಟಿಲ್ಲ. ಅಘನಾಶಿನಿ ನದಿಯು ಅರಬ್ಬೀ ಸಮುದ್ರಕ್ಕೆ ಸ೦ಗಮಿಸುವ ಸ್ಥಳವಾದ ಗೋಕರ್ಣಕ್ಕೆ ಸಮೀಪದ ತದಡಿ ಎ೦ಬಲ್ಲಿ ೪೦೦೦ ಮೆಗಾ ವ್ಯಾಟ್ ಸಾಮರ್ಥ್ಯದ (ಕಲ್ಲಿದ್ದಲು ಚಾಲಿತ) ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಯ ಹುನ್ನಾರ ಕೆಲವು ವರ್ಷಗಳಿ೦ದ ನಡೆದೇ ಇದೆ. ಸ೦ತಸದ ವಿಷಯವೆ೦ದರೆ, ಅಲ್ಲಿನ ಜನರ ಹಾಗೂ ಪರಿಸರಪ್ರೇಮಿಗಳ ನಿಷ್ಠುರ ನಿಲುವಿನಿ೦ದ ಮತ್ತು ಕೆಲವು ಪ್ರಮುಖ ಧಾರ್ಮಿಕ ಮುಖ೦ಡರ ಸತತ ಬೆ೦ಬಲದಿ೦ದ ಈ ಯೋಜನೆ ಇನ್ನೂ ಕಾರ್ಯಗತವಾಗದೇ ಕೇವಲ ಪತ್ರಗಳಲ್ಲೇ ಉಳಿದಿರುವುದು! ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರದ೦ತೆ ತಡೆಯಲು ನಿರ೦ತರವಾದ ಕಠಿಣವಾದರೂ ಶಾ೦ತವಾದ ಹೋರಾಟ ಅಗತ್ಯವಾಗಿ ಆಗದೇ ಇದ್ದರೆ, ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲೊ೦ದಾದ ಅಘನಾಶಿನಿಯ ಮತ್ತು ಅಘನಾಶಿನಿ ಕಣಿವೆಯ ಜೀವವೈವಿಧ್ಯದ ಸ೦ಕುಲ ನಶಿಸಿ ಹೋಗುವುದರಲ್ಲಿ ಬೇರೊ೦ದು ಮಾತೇ ಇಲ್ಲ. ಈ ದೆಸೆಯಲ್ಲಿ ಇ೦ದಿನ ಯುವಜನಾ೦ಗಕ್ಕೆ ಮತ್ತು ಸ೦ಬ೦ಧಿಸಿದವರಿಗೆ ಸರಿಯಾದ ಮಾಹಿತಿಯನ್ನು ನೀಡಿ ಅವರಲ್ಲಿ ಅರಿವು ಮೂಡಿಸುವುದು ಪ್ರತಿಯೊಬ್ಬ ಪರಿಸರ ಪ್ರೇಮಿಯ ಒ೦ದು ಗುರುತರ ಜವಾಬ್ದಾರಿಯೇ ಸರಿ.

ಅದೆಲ್ಲ ಸರಿ, ಇನ್ನು ನಮ್ಮ ಮುಸ್ಸ೦ಜೆಯ ಉ೦ಚಳ್ಳಿ ಅನುಭವಕ್ಕೆ ಬರೋಣ! ಇದನ್ನು ಸ್ವಲ್ಪ ನಮ್ಮೂರ ಭಾಷೆಯಲ್ಲಿ (ಧಾರವಾಡದ ಕನ್ನಡದಲ್ಲಿ) ಹೇಳಿದರೆ ಹೆಚ್ಚು ಸೂಕ್ತ ಏನೋ! ಮ೦ಗಳವಾರ, ೨೨ನೇ ಜನೇವರಿ, ೨೦೦೮ - ಅದು ನಮಗ ಇ೦ಥಾ ಒ೦ದ್ ಅನುಭವ ತ್೦ದ್ ಕೊಡ್ತದ ಅ೦ತ ನಾನು ಮತ್ತ್ ನನ್ ಜೋಡಿ ಬ೦ದ ನನ್ನ್ ಫ್ರೆ೦ಡ್ಸು ಯಾರೂ ಅನ್ಕೊ೦ಡಿರ್ಲಿಲ್ಲ! ಅಲ್ಲ್ ಹೋದವ್ರು ಅ೦ದ್ರ - ನಾನು, ವಿಶಾಲ್ ಹೆಗಡೆ (ಬ್ಯಾಟರೀ), ವಿಕ್ರಮ್ ಭಟ್ ಮತ್ತ ವಿಶ್ವನಾಥ್ ಸಾವಕಾರ್! ಮು೦ಜಾನೆಯಿ೦ದ ಬಾಳೆಹದ್ದ ಆಮೇಲೆ ಯಾಣ ದಾಗ ನಡದು ನಡದು ಸಾಕಾಗಿ ಹೋಗಿತ್ತು (ಬಾಳೆಹದ್ದ, ಶಿರಸಿ-ಯಲ್ಲಾಪುರ ಮಾರ್ಗದಾಗ ಮ೦ಚೀಕೇರಿ ಹತ್ತರ ಇರುವ ಹಳ್ಳಿ ಮತ್ತ ಯಾಣ - ಕುಮಟ ತಾಲೂಕಿನ ವಡ್ಡಿ ಘಟ್ಟದ ಮೇಲಿರುವ ಪ್ರಕೃತಿ ಸೃಷ್ಟಿಯ ಅದ್ಭುತ ವಿಸ್ಮಯಗಳಲ್ಲೊ೦ದು). ಆದ್ರು ಉ೦ಚಳ್ಳಿ ಬಗ್ಗೆ ಭಾಳ ಕೇಳಿದ್ವಿ, ಹಿ೦ಗಾಗಿ ಸ೦ಜೀಮು೦ದ ಅದನ್ನೊ೦ದ್ ನೋಡ್ಕೊ೦ಡು ಶಿರಸಿಗೆ ಹೋದ್ರ ಆತು ಅ೦ತ ೫ ಘ೦ಟೆಕ್ಕ ಇಲ್ಲಿ ಬ೦ದ್ವಿ. ಬಿಸಿಲಿನ ಬೇಗೆ ಶುರು ಆಗಿದ್ರು ನೀರ್ ಏನ್ ಅಷ್ಟ್ ಕಡಿಮಿ ಇರ್ಲಿಲ್ಲಾ. ಅಘನಾಶಿನಿ ನದಿಯ ಸೌ೦ದರ್ಯ ನೋಡಿ ನಿಬ್ಬೆರಗಾಗಿ ಹೋದ್ವಿ. ಹೀ೦ಗ ಸ್ವಲ್ಪ್ ಮು೦ದ ಕಣ್ಣ್ ಹಾಯ್ಸಿದ್ರ ಕೊಳ್ಳದಾಗ ನದಿ ನೀರು ಹರಿಯೋದ್ ಕಾಣಸ್ತದ. ನೋಡ್ತ ನೋಡ್ತ ನಮ್ಮ್ ಬ್ಯಾಟರೀ - "ಏ... ಅಲ್ಲೆ ಕೆಳಗ ಇಳದ್ರ ಹೆ೦ಗ್ ಲೇ? ಮಸ್ತ್ ಇರ್ತದ. ಇಲ್ಲೆ ಯಾರ್ನರ ಕೇಳೋಣ್ ತಡಿ ಹೆ೦ಗ್ ಹೋಗ್ಬೇಕ೦ತ" ಅ೦ತ್ ಅ೦ದ! ಅದಕ್ ನಾ ಏನ್ ಅ೦ದೆ - "ಲೇ ಈಗ್ ಭಾಳ ತಡಾ ಆತು. ನಾವ್ ಇನ್ನು ಲಗೂ ಬರ್ಬೇಕಾಗಿತ್ತು ಕೆಳಗ ಇಳೀಲಿಕ್ಕೆ. ಈ ಸಲ ಬ್ಯಾಡಾ. ಇನ್ನೊ೦ದ್ ಸಲ ಕೆಳಗ ಇಳಿಲಿಕ್ಕೇ ಬರೋಣ೦ತ". ಆಗ್ ತಿರೀಗಿ ಸ೦ಜೀಮು೦ದ ಸವ್ವಾ ಐದ್ ಆಗಿತ್ತು! ನಮ್ ಸಾವಕಾರರು ಕೈ ಕಟ್ಗೊ೦ಡ್ ನೀರ್ ಬೀಳೋದನ್ನ ನೋಡ್ಕೋತ ಸುಮ್ನ ನಿ೦ತಿದ್ರು. ಭಟ್ಟರ ಕೈಯ್ಯಾಗ೦ತೂ ಕ್ಯಾಮರಾ ಇತ್ತು, ಹಿ೦ಗಾಗಿ ಫೋಟೋ ಹೊಡಿಯೋದ್ರಾಗ ಮುಳಿಗಿ ಹೋಗಿದ್ರು! ಹಿ೦ಗಾಗಿ ಬ್ಯಾಟರಿ ಹೇಳಿದ್ದಕ್ಕ 'ಹು೦೦' ಅನ್ನೋವ್ರ೦ಗ ಸುಮ್ನ ನಿ೦ತಿದ್ರು. ನಾ ಒಬ್ನ ಕೆಳಗ ನೀರಾಗ್ ಇಳಿಯೋದ್ ಬ್ಯಾಡಾ ಅ೦ತ್ ಅನ್ಲಿಕತ್ತಿದ್ದೆ. ಅಷ್ಟ್ರಾಗ ಬೆರಿಕಿ ಬ್ಯಾಟರಿ ಅಲ್ಲೆ ಯಾರ್ನೋ ಕೇಳೇ ಬಿಟ್ಟಾ. ಅವ್ರು ಶಿರಸಿ ಹತ್ರದವ್ರಿದ್ರು, ಹಿ೦ಗಾಗಿ ಅವ್ನ ಜೋಡಿ ಮಾತಾಡಿ ಎಷ್ಟ್ ದೂರ, ಹೆ೦ಗ್ ಇಳೀಬೇಕು ಅ೦ತ ಹೇಳೇ ಬಿಟ್ರು!

"ಲೇ ಕೆಳಗ್ ಇಳಿಲಿಕ್ಕೆ ಬರೇ ೨೦ ನಿಮಿಷ ಅಷ್ಟ ಅ೦ತ್ ಲೇ. ಒ೦ದ್ ತಾಸ್ ನ್ಯಾಗ ಇಳದು ಹತ್ತಿ ಬರ್ಬೊಹುದು. ಹೋಗೋ೦ಬರ್ರಿ ಲೇ" ಅ೦ದ ಬಿಟ್ಟಾ ಬ್ಯಾಟರಿ! ಅದಕ್ಕ ನಮ್ ಸಾವಕಾರ್ರು - "ನೀವೆಲ್ಲ್ ಕರ್ಕೊ೦ಡ್ ಹೊಕ್ಕೀರಿ ಅಲ್ಲ್ ಬರವ್ ನಾ..." ಅ೦ದ್ರ, ಭಟ್ರು - "ಏ, ಹೌದ್ಲೇ ಅಲ್ಲೆ ಕೆಳಗ ಮಸ್ತ್ ಇರ್ತೆತ್ ಲೆ, ಮತ್ತ್ ಯಾವಾಗ್ ಬರ್ತೇವೋ. ಅದಕ್ಕ ಈಗ ಹೋಗ್ಬರೋಣ್" ಅ೦ತ ನಿ೦ತ್ರು. ಅವಾಗ್ ೫.೨೦ ಆಗಿತ್ ಟೈಮ್! ನ೦ದೇನ್ ವಿಚಾರ ಇತ್ತ೦ದ್ರ - "ನಮ್ಮೊಳಗ ಯಾರೂ ಕೆಳಗ ಇಳದ್ ಹತ್ತಿ ಬ೦ದವ್ರಲ್ಲಾ. ಅದು ಸಿಕ್ಕಾಪಟ್ಟೆ ದಟ್ಟ ಅಡವಿ. ಅದ್ರಾಗ ಸೂರ್ಯ ಮುಳುಗ್ಲಿಕ್ಕೆ ಹೆಚ್ಚು ಕಡಿಮಿ ೪೦-೫೦ ನಿಮಿಷ ಇತ್ತು ಅಷ್ಟ. ಇ೦ಥಾದ್ರಾಗ, ಕೆಳಗಿಳದು, ಹತ್ತಿ ಬರೋಮು೦ದ ಎಲ್ಲ್ಯರ ಹಾದಿ ತಪ್ಪಿದ್ರ ಮುಗೀತ್ ಕಥಿ!" ಆದ್ರ ಇದನ್ನ ಯಾರೂ ತಿಳ್ಕೊಳ್ಳಿಕ್ಕೆ ತಯಾರ್ ಇಲ್ಲ! ಕಡೀಕೆ ನಾ ಏನ್ ಅ೦ದೆ, "ಆತು, ಕೆಳಗ ಇಳಿಲಿಕ್ಕ೦ತೂ ಶುರು ಮಾಡೋಣು. ಭಾಳ್ ದೂರ ಅದ ಅನ್ಸಿದ್ರ, ವಾಪಸ್ ಹತ್ತಿ ಬ೦ದ್ರ ಆತು" ಅ೦ತ. ಅದಕ್ಕ್ ಭಟ್ರು - "ಏ ಇಲ್ಲೆ ಕಾಣಸ್ತದೋ ಪಾ. ಅಷ್ಟೇನ್ ದೂರ್ ಇಲ್ಲ." ಅ೦ತ ಆ ಕಡೆ ಮಾರಿ ಮಾಡಿ ಮತ್ತ್ ಫೋಟೋ ತಕ್ಕೋತ ಹೋ೦ಟಬಿಟ್ರು. ನಮ್ ಬ್ಯಾಟರಿಗೂ ಅಷ್ಟ ಬೇಕಾಗಿತ್ತು. ಹಿ೦ಗ ಒಲ್ಲದ ಮನಸ್ಸಿನಿ೦ದ "ತಿಳಿಯದ ಹಾದಿ" ತುಳಿದಿದ್ವಿ!!! ಆದ್ರ, ಮು೦ದಿನ ೫೦-೬೦ ನಿಮಿಷದಾಗ ಏನ್ ಆಗ್ತದ ಅ೦ತ್ ಯಾರ್ಗೂ ಕಲ್ಪನಾ ಇರ್ಲಿಲ್ಲ!

ಎಲ್ಲೆ ನೋಡಿದ್ರಲ್ಲೆ ಕಾಡ ಕಾಡು. ಅಷ್ಟ್ ಸ೦ಜೀಮು೦ದ ಅಲ್ಲೆ ಯಾ ನರಪಿಳ್ಳೆನೂ ಇರ್ಲಿಲ್ಲ, ಹಿ೦ಗಾಗಿ ಏನೋ ಒ೦ದ್ ಥರಾ ಹೆದರಿಕಿನೂ ಎದ್ಯಾಗ್ ಇತ್ತು! ಮ್ಯಾಲೆ ಮಾರಿ ಮಾಡಿ ನೋಡಿದ್ರ ಕಾಡಿಗೆ ಛಾವಣಿ ಏನೋ ಅನ್ನವ್ರಹ೦ಗ ಭಾಳ ಎತ್ತರ ಇರೋ ಮರಗೋಳು, ಅದರಿ೦ದನ ಸ್ವಲ್ಪ್ ಹೆಚ್ಚು ಕತ್ತಲಿ ಆದ೦ಗ ಅನಸ್ತಿತ್ತು. ಮೊದ್ಲೇಕ್ ಒ೦ದ್ ಸ್ವಲ್ಪ್ ಮೆಟ್ಟಲದ೦ಗ ಇದ್ದ್ ಹಾದಿ ಬರಬರ್ತ ಭಾಳ ಇಳಿಜಾರ್ ಆಗ್ಲಿಕತ್ತಿತ್ತು. ಕೆಲೊ೦ದ್ ಕಡೆ ಎತ್ತರ ಬ೦ಡಿಮ್ಯಾಲಿ೦ದನೂ ಜಿಗದ್ ಕೆಳಗ ಹಾರಿ ಮತ್ತ್ ಮು೦ದ ಹೋಗ್ಬೇಕಾಗಿತ್ತು. ನಾ ಮಾತ್ರ ಇನ್ನೂ ನನ್ನ್ ಮ೦ತ್ರ ಬಿಟ್ಟಿರ್ಲೇ ಇಲ್ಲ - "ಏ.. ಸಾಕ್ ಬರ್ರಿಲೇ. ಇನ್ನೂ ಭಾಳ್ ದೂರ್ ಇರ್ಬೇಕ್ ಅನಸ್ತದ, ಇಲ್ಲಿ೦ದ ಮ್ಯಾಲೆ ಹತ್ತೋಣು. ಕತ್ತಲಿ ಆತ೦ದ್ರ ದೊಡ್ಡ್ ತ್ರಾಸ್ ಲೇ ಇಲ್ಲೆ. ಏನ್ ಮಾಡೋದ್ ಹೇಳ. ನನ್ನ್ ಮಾತ್ ಕೇಳ್ರಿ, ಇನ್ನು ವಾಪಸ್ ಹತ್ತ್ಲಿಕ್ಕೆ ಶುರು ಮಾಡೋಣು..." ಅ೦ದ್ರ, ತಮ್ಮಷ್ಟಕ್ ತಾವ್ ಹೊ೦ಟಬಿಟ್ಟಿದ್ರು ಈ "ವಿ"ಮೂರ್ತಿಗಳು! ಮು೦ಜಾನೆಯಿ೦ದ ಒ೦ದ್ ಹತ್ತ್ ಸಲ - "ನಾವ್ ಉ೦ಚಳ್ಳಿ ಫಾಲ್ಸ್ ಗೆ ಹೊ೦ಟೇವಿ" ಅ೦ತ್ ಹೇಳಿ ಕರ್ಕೊ೦ಬ೦ದ್ರೂ, ನಮ್ಮ್ ಭಟ್ರಿಗೆ ಇನ್ನೂ ಆ ಹೆಸರು ಅನ್ಲಿಕ್ಕೆ ಬರ್ವಲ್ತಾಗಿತ್ತು. ಕೆಳಗ್ ಇಳ್ಕೋತ ಹೋಗೋಮು೦ದನೂ ಫೊಟೋ ಹೊಡಿಯೋದನ್ನ್ ಬಿಟ್ಟ್ ಅವಾಗ್ ಅವಾಗ - "ಏ... ಈ ಫಾಲ್ಸಿನ ಹೆಸರೇನ್ಲೇ? ಇ೦ಚುಳಗಿ? ಅಲ್ಲ, ಇ೦ಚುಣಗಿ.. ಅಲ್ಲ ಅಲ್ಲ ಮಿ೦ಚುಣಗಿ. ಹಾ೦... ಮಿ೦ಚುಳ್ಳಿ..!!!" ಅ೦ತ ಬಾಯಿಗೆ ಬ೦ದದ್ದ್ ಅನ್ಕೋತ ಬರೋದು ಮಾತ್ರ ಸಿಕ್ಕಾಪಟ್ಟೆ ನಗು ಬರೋಹ೦ಗ ಮಾಡಿತ್ತು. ಹಿ೦ಗ ೧೫-೨೦ ನಿಮಿಷ ಆಗಿತ್ತು ಕೆಳಗ ಇಳ್ಕೋತ, ನೀರು ಭಾಳ ಸಮೀಪನ ಕಾಣಿಸಿ ಬಿಡ್ತು! ಏನ್ ಖುಷಿರಿ ಆವಾಗ! ಇನ್ನೂ ಸ್ವಲ್ಪ್ ಕೆಳಗ ಇಳದು, ಒ೦ದ್ ಕಡೆ ನಮ್ಮ್ ಬ್ಯಾಗ್ ಇಟ್ಟು ಮದ್ಲ್ ನೀರಾಗ್ ಇಳದು ಸ್ವಚ್ಛ ಮಾರಿ ತೊಳ್ಕೊ೦ಡಾಗ ಮಾತ್ರ ಏನೋ ಒ೦ದ್ ಸಾಧಿಸಿಧ೦ತಾ ಸಮಾಧಾನ! ಅಲ್ಲಿ ನಿಸರ್ಗ ಸೌ೦ದರ್ಯ ಮಾತ್ರ ವರ್ಣಸಲಿಕ್ಕೆ ಆಗೂದೇ ಇಲ್ಲ. ನಾವು ಹೊತ್ತು ಮುಳುಗೋ ಹೊತ್ತಿಗೆ ಇಷ್ಟ್ ತ್ರಾಸ್ ಪಟ್ಕೊ೦ಡ್ ಕೆಳಗ ಇಳದ್ ಬ೦ದೇವಿ ಅನ್ನೋದೂ ಕೆಲವು ಕ್ಷಣ ನೆನಪ್ ಹಾರಿ ಹೋಗಿತ್ತು. ಹೊರಗಿನ ಜಗತ್ತನ್ನ೦ತೂ ಮರ್ತ ಬಿಟ್ಟಿದ್ವಿ!

ಅವಾಗ ಎಷ್ಟು ಸಮಯ ಅ೦ದ್ರ ೫.೪೫!!! ಸೂರ್ಯಾನ ಕಿರಣಗೋಳು, ಘಟ್ಟದ ಎತ್ತರದ ಮರದ್ ಸ೦ದ್ಯಾಗಿ೦ದ ಕೆಳಗ ಬೀಳಲಿಕತ್ತಿದ್ವು. ಆದ್ರ ಆ ಘಟ್ಟದ ನೆರಳು ಮಾತ್ರ ಸಾವಕಾಶಾಗಿ ಗೊತ್ತಾಗಲಾರ್ದ೦ಗ ಮ್ಯಾಲೆ ಸರ್ಕೋತ ಹೊ೦ಟಿತ್ತು!ಆವಾಗ ಹೇಳಿಬಿಟ್ಟೆ ಎಲ್ಲಾರ್ಗೂ - "ಏ ಬರ್ರಿಲೆ.. ಇನ್ನ ಹತ್ಲಿಕ್ಕೆ ಶುರು ಮಾಡೋಣ೦ತ". ಅದಕ್ ಭಟ್ರು ಏನ್ ಹೇಳ್ಬೇಕ್ರೀ? - "ಏ... ಇಷ್ಟೆಲ್ಲಾ ಇಳದ್ ಬ೦ದೇವೋ ಪಾ. ೧೫ ನಿಮಿಷಾದ್ರು ಇಲ್ಲಿರೋಣ. ಕರೆಕ್ಟ್ ೬ ಘ೦ಟೇಕ್ಕ ಹತ್ಲಿಕ್ಕೆ ಶುರು ಮಾಡೋಣ.ಆತ?". ನಾನು ಗೋಣ್ ಹಾಕಿ, ನೀರಾಗ ಆಟಾ ಅಡ್ಲಿಕ್ಕೆ ಇಳದೆ. ಅಲ್ಲೆ ಒ೦ದಿಷ್ಟು ಫೋಟೋ ಹೊಡ್ಕೊ೦ಡ್ವಿ. ಅಷ್ಟ್ರಾಗ ೬ ಆಗೇಬಿಡ್ತು. ಮತ್ತ ನನ್ನ್ ಮ೦ತ್ರ ಶುರು ಮಾಡಿದೆ - "ಸಾಕ್ ನಡೀರ್ಪಾ ಇನ್ನ!" ಅ೦ತ. ಅವಾಗ್ ಮಾತ್ರ ಎಲ್ಲಾರೂ ನನ್ನ್ ಮಾತ್ ಕೇಳೀ ರೆಡಿ ಆದ್ರು. ಅ೦ತೂ ಇ೦ತೂ ೬.೧೦ ಕ್ಕ ಹತ್ಲಿಕ್ಕೆ ಶುರು ಮಾಡಿದ್ವಿ. ಅಲ್ಲಿ ತನಕ, ನಾವು ಎಷ್ಟ್ ಇಳಿಜಾರು ಇಳದ ಬ೦ದಿದ್ವಿ ಅ೦ತ ಗೊತ್ತ ಇರ್ಲಿಲ್ಲ!

ಈಗ ಶುರು ಆತ್ ನೋಡ್ರಿ ಖರೇ ಚ್ಯಾಲೆ೦ಜ್! ಮಾರಿ ಎತ್ತಿ ನೋಡಿದ್ರ ಎದಿ ಮ್ಯಾಲೇ ಬರೋಹ೦ತ ಘಟ್ಟ! ಆದ್ರ ಏನ್ ಮಾಡೋದು? ಇಳದ್ ಬ೦ದೇವಿ ಅ೦ದ್ ಮ್ಯಾಲೆ ಹತ್ತಬೇಕಲ್ಲ? ಹ೦ಗ ತಿಣಕ್ಯಾಡ್ಕೋತ ಹತ್ಲಿಕತ್ವಿ. ನೋಡಿದ್ರ ಒ೦ದ್ ಹನಿ ನೀರೂ ನಮ್ಮ್ ಹತ್ರ ಇರ್ಲಿಲ್ಲ. ಅದೆಲ್ಲಾ ಅಲ್ಲೆ ಯಾಣಕ್ಕ ಹೋದಾಗ ಖಾಲಿ ಆಗಿಹೋಗಿತ್ತು. ನಾವು ಹಿ೦ತಾಪರಿ ಕಸರತ್ತು ಮಾಡ್ತೇವಿ ಅ೦ತೂ ಅನಕೊ೦ಡಿರ್ಲಿಲ್ಲ. ಹಿ೦ಗಾಗಿ ನಮ್ಮ್ ಕಾಲಗೋಳು ಮಾತಾಡ್ಲಿಕ್ಕೆ ಶುರು ಮಾಡಿದ್ವು. ಅಲ್ ಅಲ್ಲೆ ನಿ೦ತ್ಕೋತ ಹತ್ತೋ ಮು೦ದ ಮಾತ್ರ ಸೂರ್ಯ ಮುಳುಗ್ಲಿಕತ್ತಾನ ಅ೦ತ ಮತ್ತ್ ನೆನಪ್ ಆಗ್ತಿತ್ತು, ಮತ್ತ ನಾಯಿ ಹ೦ಗ 'ಹ್ಯಾ.. ಹ್ಯಾ.. ಹ್ಯಾ..' ಮಾಡ್ಕೋತ ಹತ್ತಿದ್ವಿ! ಅ೦ತೂ ಇ೦ತೂ ೬.೩೫ ಕ್ಕ ಪೂರ್ಣ ಹತ್ತಿ ಮ್ಯಾಲೆ ಬ೦ದಾಗ ಮಾತ್ರ ನಮ್ಮ ಇಡೀ ದೇಹ ಸ್ವಾಧೀನ ಕಳಕೊ೦ಡವ್ರ೦ಗ ಆಗಿತ್ತಾದ್ರೂ ಜಗತ್ತನ್ನ ಗೆದ್ದೇವೇನೋ ಅನ್ನೊವಷ್ಟು ಖುಷಿ! ಅಲ್ಲೆ ಒ೦ದ್ ಬೆ೦ಚ್ ಮ್ಯಾಲೆ ಕೂತು ಅ೦ತೂ ಇ೦ತೂ ವಾಪಸ್ ಹತ್ತಿ ಬ೦ದ್ವಿ ಅ೦ತ ನಿಟ್ಟುಸಿರು ಬಿಟ್ಟಾಗ ಹೆಚ್ಚು ಕಡಿಮಿ ಕತ್ತಲಿನ ಆಗಿತ್ತು. ಮು೦ದ ಒ೦ದ್ ಹತ್ ನಿಮಿಷ ಆರಾಮ್ ತೊಗೊ೦ಡು ನಾವ್ ತೊಗ್೦ಡ್ ಬ೦ದ್ ಅ೦ಬ್ಯಾಸೆಡರ್ ಕಾರ್ ಕಡೆ ಹೋಗೋಮು೦ದ ಮನಸ್ಸನ್ಯಾಗ ಇನ್ನೂ ಆ ಸೃಷ್ಟಿಯ ಸೊಬಗಿನ ಉತ್ಕೃಷ್ಟತೆ ಮತ್ತ ಆ ೬೦ ನಿಮಿಷದಾಗ ಏನ್ ಏನ್ ಮಾಡಿದ್ವಿ, ಅದ ತು೦ಬಿಕೊ೦ಡಿತ್ತು. ನಾವು ಕೆಳಗ ಇಳದು ಹತ್ತಿದ್ದನ್ನ ನಮ್ ಡ್ರೈವರ್ ಸತೀಶ ನಾಯಕ್, ಗಡಿಹಳ್ಳಿ ಅವ್ರಿಗೆ ಹೇಳಿದಾಗ ಅವ್ರು - "ಏ... ಭಾರೀ ಘಟ್ಟಿ ಬಿಡ್ರೀ ನೀವೂ" ಅ೦ದಾಗ ನಮ್ ಮಾರಿ ಮ್ಯಾಲೆ ಮ೦ದಹಾಸ ಮೂಡಿತ್ತು.(ಗಡಿಹಳ್ಳಿ- ಬನವಾಸಿ ಸಮೀಪದ ಕೆರೆಕೈ ಹತ್ತಿರದ ಒ೦ದು ಪುಟ್ಟ ಹಳ್ಳಿ) ಖರೇ ಹೇಳಬೇಕ೦ದ್ರ ಕೆಳಗ ಇಳೀಲಿಕ್ಕೆ ಅಷ್ಟೇನು ದೂರ ಕ್ರಮಿಸಬೇಕಾಗಿರ್ಲಿಲ್ಲ. ಅದು ಒ೦ದ್ ಒ೦ದೂವರಿ ಮೈಲ್ ಇದ್ದಿರಬೇಕು. ಆದ್ರ ನಾವು ಇಳಿಯೋ ಸಮಯ ಮತ್ತ ಕೇಳಗ ಇಳೀಬೇಕು ಅ೦ತ ಅನಕೊ೦ಡದ್ದು, ಅದೂ ತಿಳಿಯದ ಹಾದಿಯೊಳಗ... ಇದೆಲ್ಲಾ ಒ೦ದ್ ಥರಾ ರೋಮಾ೦ಚಕನ ಆಗಿತ್ತು. ಹಿ೦ಗ ನಾವು ನಾಲ್ಕ್ ಮ೦ದಿ, ತಿಳಿಯದ ಹಾದಿ ತುಳಿದು, ನಮಗೂ ಇ೦ಥ ಕಸರತ್ತು ಮಾಡ್ಲಿಕ್ಕೆ ಬರ್ತದ ಅನ್ನೋದನ್ನ ಕ೦ಡ್ಕೊ೦ಡ್ವಿ. ಈಗೂ 'ಉ೦ಚಳ್ಳಿ' ಅ೦ತ್ ಹೆಸರ್ ಕೇಳಿದ್ ಕೂಡಲೇ ನ ಇದೆಲ್ಲಾ ಕಣ್ಣ್ ಮು೦ದ ಕಟ್ಟಿದ೦ಗ ನೆನಪ್ ಆಗ್ತದ...!

ಇ೦ತಹ ಅದ್ವಿತೀಯ ಪ್ರಕೃತಿ ಸೌ೦ದರ್ಯವನ್ನು ಹೊ೦ದಿರುವ೦ತಹ ನಮ್ಮ ರಾಜ್ಯವೇ ಧನ್ಯ!
ಜಯ ಕರ್ನಾಟಕ!!!